Nirathanka
  • HOME
    • Team
  • POSH
  • Online Groups
  • Books
  • BLOG
  • Contact Us

ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಕನ್ನಡಿಗರು ಮತ್ತು ಕನ್ನಡ ಭಾಷೆ

7/10/2018

0 Comments

 
Picture
ಜಿ.ಪಿ.ನಾಯಕ್
ಪ್ರಧಾನ ಸಲಹೆಗಾರರು, ಟ್ಯಾಲೆಂಟ್ ಅವಿನ್ಯೂಸ್.

ಮಾನವ ಸಂಪನ್ಮೂಲ ನಿರ್ವಹಣೆಯು (ಮಾ.ಸಂ.ನಿ.) ಸಮಕಾಲೀನ ಕೈಗಾರಿಕೆ ಮತ್ತು ಇತರೆ ಸಂಸ್ಥೆಗಳಲ್ಲಿನ ಆಡಳಿತ ವ್ಯವಸ್ಥೆಯ ಮುಖ್ಯ ಅಂಗವಾಗಿದೆ. ಏಕೆಂದರೆ ಯಾವುದೇ ಕೈಗಾರಿಕೆ ಅಥವಾ ಸಂಸ್ಥೆಯ ಉಳಿವು-ಅಳಿವು ಅದರ ಮಾನವ ಸಂಪನ್ಮೂಲ ನಿರ್ವಹಣೆಯ ದಕ್ಷತೆಯನ್ನು ಅವಲಂಬಿಸಿರುತ್ತದೆ. ಕಾರ್ಖಾನೆ, ವಾಣಿಜ್ಯ ಸಂಸ್ಥೆ ಹಾಗೂ ಇತರೆ ಸಂಘಸಂಸ್ಥೆಗಳಲ್ಲಿ, ಜನರನ್ನು ನೌಕರಿಗಾಗಿ ನೇಮಕ ಮಾಡುವುದು, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಅವರಿಗೆ ತರಬೇತಿ ನೀಡುವುದು, ಅವರು ಮಾಡುವ ಕೆಲಸಕ್ಕೆ ಸೂಕ್ತ ಸಂಬಳ ಮತ್ತು ಭತ್ಯೆಯನ್ನು ನೀಡುವುದು, ಮಾಲೀಕ ಮತ್ತು ಕಾರ್ಮಿಕರ ನಡುವೆ ಕಲಹ ರಹಿತ ಸಂಬಂಧವನ್ನು ಬೆಳೆಸುವುದು, ಕಾರ್ಮಿಕ ಕಾಯಿದೆಗಳನ್ನು ಪಾಲಿಸುವುದು, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಪೂರೈಸಲು ನೌಕರರ ಮನವೊಲಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾನವ ಸಂಪನ್ಮೂಲ ನಿರ್ವಹಣೆ ಎಂದು ಹೇಳಲಾಗುತ್ತದೆ.
ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ಥಳೀಯ ಭಾಷೆ ಮತ್ತು ಜನರಿಗೆ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದು, ಬಹಳಷ್ಟು ಬಾರಿ ಈ ಆರೋಪಗಳು ನಿಜವಾಗಿವೆ. ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ  ಭೂಮಿ ಮಂಜೂರು ಮಾಡುವಾಗ, ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕೆಂಬ ಷರತ್ತು ಹಾಕಿರುತ್ತದೆ. ಅದೇ ರೀತಿ ಬಹಳಷ್ಟು ಕಾರ್ಮಿಕ ಕಾಯಿದೆಗಳಲ್ಲಿ ಕನ್ನಡ ಬಳಸಬೇಕೆಂಬ ನಿಯಮಗಳಿವೆ. ಆದರೆ ರಾಜ್ಯ ಸರ್ಕಾರ ಈ ಷರತ್ತು ಮತ್ತು ನಿಯಮಗಳನ್ನು ಸರಿಯಾಗಿ ಜಾರಿಮಾಡುತ್ತಿಲ್ಲವಾದ್ದರಿಂದ ಸ್ಥಳೀಯ ಭಾಷೆಯ ಬಳಕೆಯಾಗಲಿ ಅಥವಾ ಸ್ಥಳೀಯ ಜನರಿಗೆ ನೌಕರಿಗಳಾಗಲಿ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದಾಗಿ ಸಾಮಾಜಿಕ ಅಶಾಂತಿ ಮತ್ತು ಕೈಗಾರಿಕಾ ವಿರೋಧಿ ಧೋರಣೆಗಳು ಹುಟ್ಟಿಕೊಳ್ಳುತ್ತವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಕೆಳಕಾಣಿಸಿರುವ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದ ಕಾನೂನು ಮತ್ತು ಕಾರ್ಮಿಕ ಇಲಾಖೆಗಳು, ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ವ್ಯವಸ್ಥಾಪಕರು ಮತ್ತು ಕಾರ್ಮಿಕ ಸಂಘಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. 
 
ಹೊಸ ಕಾನೂನು ಅಥವಾ ಹೊಸ ನಿಯಮಗಳ ಕರಡು ಮೂಲತಃ ಕನ್ನಡದಲ್ಲಾಗಬೇಕು
ಹೊಸ ಕಾನೂನಿನ ಕರಡನ್ನು ಆಂಗ್ಲ ಭಾಷೆಯಲ್ಲಿ ತಯಾರಿಸಿ ವಿಧಾನಮಂಡಲದಲ್ಲಿ ಅನುಮೋದನೆಯಾದ ನಂತರ ರಾಜ್ಯಪಾಲರ ಸಹಿ ಪಡೆದು ಆಂಗ್ಲ ಭಾಷೆಯಲ್ಲಿ ಅಧಿಸೂಚನೆ ಹೊರಡಿಸಲಾಗುತ್ತಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿ ಮಾಡಿ ಕಾರ್ಮಿಕರಿಗೆ ತಿಳಿಸುವುದರಿಂದ ಪ್ರಯೋಜನವಿಲ್ಲವೆಂದು ಕೈಗಾರಿಕಾ ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತಿರುವ ಸ್ಥಳೀಯ ಜನರು ಆಂಗ್ಲಭಾಷೆಯಲ್ಲಿರುವ ಕಾನೂನು ಹಾಗೂ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಕುಶಲತೆಯನ್ನು ಹೊಂದಿಲ್ಲ.

ಆಂಗ್ಲಭಾಷೆಯಲ್ಲಿರುವ ಕಾನೂನು ಹಾಗೂ ನಿಯಮಗಳನ್ನು ಅರ್ಥಪೂರ್ಣವಾಗಿ ಕನ್ನಡಕ್ಕೆ ಅನುವಾದ ಮಾಡುವವರ ಕೊರತೆ ಇದೆ. ಕನ್ನಡಕ್ಕೆ ಅನುವಾದ ಮಾಡಿಸುವ ವೆಚ್ಚವೂ ಸಹ ಬಹಳವಾಗುತ್ತದೆ. ಹಾಗೆಯೇ ಕನ್ನಡ ಮತ್ತು ಆಂಗ್ಲ ಭಾಷೆಯೆರಡರಲ್ಲಿಯೂ ಪಾಂಡಿತ್ಯವಿರುವ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥಾಕರ ಕೊರತೆಯೂ ಇದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ  ಯಾವುದೇ ಕಾನೂನು ಅಥವಾ ನಿಯಮಗಳನ್ನು ಕನ್ನಡ ಭಾಷೆಯಲ್ಲಿ ತಯಾರಿಸಿ ವಿಧಾನಮಂಡಲದಲ್ಲಿ ಅನುಮೋದನೆಯಾದ ನಂತರ ರಾಜ್ಯಪಾಲರ ಸಹಿ ಪಡೆದು ಕನ್ನಡ ಭಾಷೆಯಲ್ಲಿ ಅಧಿಸೂಚನೆ ಹೊರಡಿಸಿದರೆ ಕೈಗಾರಿಕೆ ಮತ್ತು ವಾಣಿಜ್ಯಸಂಸ್ಥೆಗಳ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಕನ್ನಡದ ಬಳಕೆ ಸಹಜವಾಗಿಯೇ ಆಗುತ್ತದೆ. ಕಾನೂನು ಅಥವಾ ನಿಯಮಗಳನ್ನು ಮಾತೃಭಾಷೆಯಲ್ಲಿ ಓದಿ ಅರ್ಥಮಾಡಿಕೊಂಡಾಗ ಕಾರ್ಮಿಕರ ಸಂಶಯಾಧಾರಿತ ಸಮಸ್ಯೆಗಳು ಪರಿಹಾರವಾಗುತ್ತವೆ.
 
ಕಾರ್ಮಿಕ ಇಲಾಖೆಯು ಕಾರ್ಖಾನೆ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡವನ್ನು ಜಾರಿಗೊಳಿಸಬೇಕು
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯೂ 29 ಕಾರ್ಮಿಕ ಕಾಯಿದೆಗಳ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿದೆ. ಈ ಎಲ್ಲಾ ಕಾನೂನುಗಳ ಅನುಷ್ಠಾನದಲ್ಲಿ ಕನ್ನಡವನ್ನು ಬಳಸುವುದು ಅವರ ಆದ್ಯ ಕರ್ತವ್ಯವಾಗಬೇಕು. ಈ ಇಲಾಖೆಯ ಹೆಚ್ಚುವರಿ ಕಾರ್ಮಿಕ ಆಯುಕ್ತರಿಂದ ಹಿಡಿದು ಕಾರ್ಮಿಕ ನಿರೀಕ್ಷಕರವರೆವಿಗೆ ಎಲ್ಲಾ ಅಧಿಕಾರಿಗಳು ಕನ್ನಡದವರೇ ಆಗಿದ್ದಾರೆ. ಇವರುಗಳು ಕೈಗಾರಿಕಾ ತಪಾಸಣೆಗೆ ಹೋದಾಗ ಕೈಗಾರಿಕೆಯ ಆವರಣದಲ್ಲಿ ಕಾನೂನಿನ ನಿಯಮಗಳನ್ನು ಕನ್ನಡದಲ್ಲಿ ಪ್ರದರ್ಶಿಸದಿರುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಂಡರೆ ಸ್ವಲ್ಪವಾದರೂ ಕನ್ನಡದ ಅನುಷ್ಠಾನವಾಗುತ್ತದೆ. ಹಾಗೆಯೇ ಯಾವುದೇ ಸಂಸ್ಥೆಯ ಸ್ಥಾಯಿ ಆದೇಶದ ಅನುಮೋದನೆಗಾಗಿ ಕನ್ನಡದಲ್ಲಿರುವ ಕರಡನ್ನು ಮಾತ್ರ ಸ್ವೀಕರಿಸಿ, ಅನುಮೋದಿಸಿದರೆ ಅದನ್ನು ಕಾರ್ಮಿಕರು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
 
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥಾಪಕರ ಭಾಷಾಜ್ಞಾನ
ಕೈಗಾರಿಕೆಗಳಲ್ಲಿ ಕನ್ನಡದ ಸಮರ್ಪಕ ಬಳಕೆಯಾಗಬೇಕಾದರೆ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥಾಪಕರಿಗೆ ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲಿಯೂ ಹಿಡಿತವಿರಬೇಕು ಮತ್ತು ಕನ್ನಡದ ಮೇಲೆ ಪ್ರೀತಿ ಹಾಗೂ ವ್ಯಾಮೋಹವಿರಬೇಕು. ಆಗ ಮಾತ್ರ ಅವರು ಕನ್ನಡದಲ್ಲಿರುವುದನ್ನು ಕನ್ನಡೇತರ ಮಾಲೀಕರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಬಲ್ಲರು ಮತ್ತು ಅನುವಾದಕರು ಮಾಡಿಕೊಡುವ ಕನ್ನಡ ಅವತರಣಿಕೆಗಳು ಸರಿ ಎಂದು ದೃಢೀಕರಿಸಬಲ್ಲರು.

ಒಂದು ಕಡೆ ಕನ್ನಡ ಭಾಷೆಯ ನಿರ್ಲಕ್ಷ್ಯವಾದರೆ, ಮತ್ತೊಂದೆಡೆ ನೇಮಕಾತಿ ಮತ್ತು ಬಡ್ತಿಯಲ್ಲಿ ಕನ್ನಡಿಗರಿಗೆ ನ್ಯಾಯ ಸಿಗದಂತಾಗಿದೆ ಎಂಬ ಆರೋಪವಿದೆ. ಸ್ಥಳೀಯರ ನೇಮಕವಾದರೆ ಕೈಗಾರಿಕಾ ಕಲಹಗಳು ಹೆಚ್ಚಾಗುತ್ತವೆಂಬ ಮೂಢನಂಬಿಕೆಯಿಂದಾಗಿ, ಬಹಳಷ್ಟು ಕಾರ್ಖಾನೆಗಳಲ್ಲಿ ಸ್ಥಳೀಯರ ನೇಮಕಾತಿಗೆ ಸಾಕಷ್ಟು ಅವಕಾಶ ಮಾಡಿಕೊಡಲಾಗುತ್ತಿಲ್ಲ. ಇದರಿಂದ ಹತಾಶೆಗೊಂಡ ಸ್ಥಳೀಯರು ಭಾಷೆ ಮತ್ತು ಜಾತಿಯ ಆಧಾರದ ಮೇಲೆ ಸಂಘಟಿತರಾಗಿ ಕೈಗಾರಿಕ ವಿವಾದಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಆದರೆ ಹೊರಗಿನ ಜನರು ಹೆಚ್ಚಾಗಿ ನೇಮಕವಾಗಿರುವ ಕಾರ್ಖಾನೆಗಳಲ್ಲಿ ಕೈಗಾರಿಕ ಶಾಂತಿಯ ಬದಲು ಬಲಿಷ್ಠವಾದ ಕಾರ್ಮಿಕ ಸಂಘಗಳು ಹುಟ್ಟಿಕೊಂಡಿವೆ ಎಂಬುದು ನಿಜಸಂಗತಿ. ಈ ಮೂಡನಂಬಿಕೆ, ಸೇವಾ ಕ್ಷೇತ್ರದಲ್ಲಿ ಮತ್ತು ಸಾಫ್ಟ್‍ವೇರ್ ಕ್ಷೇತ್ರದಲ್ಲಿ ಕಡಿಮೆಯಿದೆ. ಸ್ಥಳೀಯರನ್ನು ನೇಮಕ ಮಾಡಿಕೊಂಡಿರುವುದರಿಂದ ಸೇವಾ ಮತ್ತು ಸಾಫ್ಟ್‍ವೇರ್ ಕಂಪನಿಗಳ ಉತ್ಪಾದನೆಯಲ್ಲಾಗಲಿ, ಲಾಭಾಂಶದಲ್ಲಾಗಲಿ, ಅಥವಾ ಕೈಗಾರಿಕಾ ಬಾಂಧವ್ಯದಲ್ಲಾಗಲಿ ಇಳಿಮುಖವಾಗಿಲ್ಲ.

ನೌಕರಿಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗದಿದ್ದರೂ ಸಹ ಸಮಾನತೆ ಸಿಗಬೇಕಾಗಿದೆ. ಕನ್ನಡಿಗ ಮತ್ತು ಪರಕೀಯ ವ್ಯಕ್ತಿಗಳಿಬ್ಬರೂ ತಮ್ಮ ಅರ್ಹತೆ ಮತ್ತು ಕೌಶಲ್ಯದಲ್ಲಿ ಸರಿಸಮನಾಗಿರುವ ಸಂದರ್ಭಗಳಲ್ಲಿ ಕನ್ನಡಿಗರನ್ನು ನೇಮಕ ಮಾಡುವುದು ನ್ಯಾಯಬದ್ಧವೂ ಹಾಗೂ ನೈತಿಕವು ಆಗುತ್ತದೆ. ನೌಕರಿಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಸಮಾನತೆ ಸಿಗಬೇಕಾದರೆ, ಮಹರಾಷ್ಟ್ರ ರಾಜ್ಯದ ಮಾದರಿಯಲ್ಲಿ-ಯಾವುದೇ ಕೈಗಾರಿಕೆಯಲ್ಲಿ ಕನಿಷ್ಠ ಒಬ್ಬ ಮಾನವ ಸಂಪನ್ಮೂಲ ಅಧಿಕಾರಿ ಕನ್ನಡದವನಾಗಿದ್ದು ನೇಮಕಾತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಂಡು ಮೂರು ತಿಂಗಳಿಗೊಮ್ಮೆ ರಾಜ್ಯ ಸರ್ಕಾರಕ್ಕೆ ಈ  ಬಗ್ಗೆ ವರದಿ ಸಲ್ಲಿಸಬೇಕು.  
 
ಭಾಷೆ ಮತ್ತು ನೇಮಕಾತಿ ಸಮಾನತೆಯಲ್ಲಿ ಕಾರ್ಮಿಕ ಸಂಘಗಳ ಪಾತ್ರ
ಯಾವುದೇ ಕೈಗಾರಿಕೆಯಲ್ಲಿನ ಆಂತರಿಕ ಆಗುಹೋಗುಗಳು ಮತ್ತು ಅಸಮಾನತೆಗಳು ಕಾರ್ಮಿಕ ಸಂಘಗಳಿಗೆ ತಿಳಿದಿರುತ್ತದೆ. ಬಹಳಷ್ಟು ಕಾರ್ಮಿಕ ಸಂಘಗಳು ಈ ಅಸಮಾನತೆಯನ್ನು ಆಡಳಿತ ವರ್ಗದ ಗಮನಕ್ಕೆ ತಂದು ನ್ಯಾಯ ದೊರಕಿಸುವಷ್ಟು ಬಲಶಾಲಿಯಾಗಿವೆ. ಇದಕ್ಕಾಗಿ ಕಾರ್ಮಿಕ ಸಂಘದ ನಾಯಕರುಗಳು ಕನ್ನಡಿಗರಾಗಬೇಕಾಗಿದೆ.
 
ಭಾಷೆ ಮತ್ತು ನೇಮಕಾತಿ ಸಮಾನತೆಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ.
ಕನ್ನಡಕ್ಕಾಗಿ ಮತ್ತು ಕನ್ನಡಿಗರಿಗಾಗಿ ಹೋರಾಡುವ ಸ್ವಯಂಸೇವಾ ಸಂಸ್ಥೆಗಳು ಭಾಷೆ ಮತ್ತು ನೇಮಕಾತಿ ಅಸಮಾನತೆಯನ್ನು ಹೋಗಲಾಡಿಸಲು ಬಹಳಷ್ಟು ಅವಕಾಶವಿದೆ. ಈ ಸಂಸ್ಥೆಗಳು ಕನ್ನಡೇತರರಿಗೆ ಕನ್ನಡ ಕಲಿಸಬಹುದು, ಕನ್ನಡಕ್ಕೆ ಅಥವಾ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ಕೈಗಾರಿಕೆಗಳ ಬಗ್ಗೆ ಸರ್ಕಾರಕ್ಕೆ ತಿಳಿಸಬಹುದು ಅಥವಾ ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ಹಾಗು  ಭಾಷೆ ಮತ್ತು ನೇಮಕಾತಿ ಸಮಾನತೆಯಲ್ಲಿ ಉತ್ತಮ ಕೆಲಸ ಮಾಡಿರುವ ಕೈಗಾರಿಕೆಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಬಹುದು.
 
ಉತ್ತಮ ನೌಕರಿ ಪಡೆಯುವಲ್ಲಿ ಕನ್ನಡಿಗರಿಗಾಗುತ್ತಿರುವ ಅನ್ಯಾಯ
ನೌಕರಿ ಪಡೆಯುವಲ್ಲಿ ಅಥವಾ ಉತ್ತಮ ನೌಕರಿ ಪಡೆಯುವಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೂ ಅನ್ಯಾಯವಾಗಿಲ್ಲ. ಲಕ್ಷಾಂತರ ಮಂದಿ ಕನ್ನಡಿಗರು ಕರ್ನಾಟಕದಲ್ಲಿ, ಮುಂಬೈ ಹಾಗು ದೆಹಲಿಗಳಂತಹ ನಗರಗಳಲ್ಲಿ, ಮತ್ತು ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಂಡಿರುತ್ತಾರೆ. ಅಂತಹ ಉನ್ನತ ಹುದ್ದೆಗಳಲ್ಲಿರುವ ಕನ್ನಡಿಗರು ಇತರೆ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡದಿರುವುದು ದುರದೃಷ್ಟಕರ.
​
ಉತ್ತಮ ನೌಕರಿ ಪಡೆಯಬೇಕಾದರೆ ಇತರೆ ಕನ್ನಡಿಗರಾದವರು ತಮ್ಮ ಉದ್ಯೋಗಾರ್ಹ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಈ ಕೌಶಲ್ಯಗಳಲ್ಲಿ ಮುಖ್ಯವಾದವುಗಳೆಂದರೆ, ಆಂಗ್ಲ ಭಾಷೆಯ ಮೇಲೆ ಹಿಡಿತ, ಆಧುನಿಕ ತಂತ್ರಜ್ಞಾನಗಳ ಪೂರ್ಣ ಅರಿವು, ವಾಕ್ ಚಾತುರ್ಯ, ರಾಜತಾಂತ್ರಿಕತೆ, ಕಾರ್ಯದಕ್ಷತೆ, ಗುರಿ ಸಾಧಿಸುವ ಛಲ, ನಾಯಕತ್ವ, ಪ್ರಾಮಾಣಿಕತೆ, ವೈಯಕ್ತಿಕ ಶಕ್ತಿ, ವೈಯಕ್ತಿಕ ಶೈಲಿ ಇತ್ಯಾದಿಗಳು. ಕನ್ನಡಿಗರ ಉಳಿವೇ ಕನ್ನಡದ ಉಳಿವು. ಬನ್ನಿ, ಕನ್ನಡಿಗರಾದ ನಾವೆಲ್ಲರೂ ಕನ್ನಡ ಭಾಷೆ ಮತ್ತು ಕನ್ನಡ ಜನರ ಉಳಿವಿಗಾಗಿ ಪಣ ತೊಟ್ಟು ಶ್ರಮಿಸೋಣ. 

0 Comments

Your comment will be posted after it is approved.


Leave a Reply.

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    Video


    Picture

    Inviting articles

    Inviting meaningful articles on HR and Labour Law to publish in our website 

    Submit Your article
    Human Resources And Labour Law Classes

    RSS Feed


Powered by Create your own unique website with customizable templates.
  • HOME
    • Team
  • POSH
  • Online Groups
  • Books
  • BLOG
  • Contact Us